ಸಾರಾಂಶ
ಪ್ರಶಸ್ತಿಯನ್ನು ಮೇ ೨೭ರಂದು ನಡೆಯುವ ಎಂ.ಜಿ.ಎಂ. ಕಾಲೇಜಿನ ವಾರ್ಷಿಕ ಮುದ್ದಣ ಸಾಹಿತ್ಯೋತ್ಸವದ ಸಂದರ್ಭದಲ್ಲಿ ನೀಡಿ ಗೌರವಿಸಲಾಗುತ್ತದೆ ಎಂದು ರಾಷ್ಟ್ರಕವಿ ಗೋವಿಂದಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಖ್ಯಾತ ವಿಮರ್ಶಕ ಪ್ರೊ. ವಿ.ಎಂ. ಇನಾಂದಾರ್ ಅವರ ನೆನಪಿನಲ್ಲಿ ನೀಡುವ ‘ಇನಾಂದಾರ್ ಪ್ರಶಸ್ತಿ’ಗೆ ವಿಮರ್ಶಕ ಡಾ. ಎ.ಮೋಹನ್ ಕುಂಟಾರ್ ಅವರ ‘ಸ್ವಗತ ಮತ್ತು ಸಂವಾದ’ ವಿಮರ್ಶಾ ಕೃತಿಯು ೨೦೨೩ರ ಸಾಲಿಗೆ ಆಯ್ಕೆಯಾಗಿದೆ.ಪ್ರಶಸ್ತಿಯನ್ನು ಮೇ ೨೭ರಂದು ನಡೆಯುವ ಎಂ.ಜಿ.ಎಂ. ಕಾಲೇಜಿನ ವಾರ್ಷಿಕ ಮುದ್ದಣ ಸಾಹಿತ್ಯೋತ್ಸವದ ಸಂದರ್ಭದಲ್ಲಿ ನೀಡಿ ಗೌರವಿಸಲಾಗುತ್ತದೆ ಎಂದು ರಾಷ್ಟ್ರಕವಿ ಗೋವಿಂದಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂಟಾರ್ ಅವರು ಹಂಪಿಯ ಕನ್ನಡ ವಿವಿಯಲ್ಲಿ ಭಾಷಾಂತರ ವಿಭಾಗದಲ್ಲಿ ಸಂಶೋಧನಾ ಸಹಾಯಕರಾಗಿ ಸೇರಿ ಉಪನ್ಯಾಸಕರಾಗಿ, ಪ್ರವಾಚಕರಾಗಿ, ಪ್ರಸ್ತುತ ಭಾಷಾಂತರ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ೨೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ೬ಕ್ಕೂ ಹೆಚ್ಚು ಅನುವಾದ ಅಧ್ಯಯನಗಳು ಹಾಗೂ ಅನುವಾದ ಸಿದ್ಧಾಂತ ಸಂಬಂಧಿ ಕೃತಿಗಳು, ೧೪ ಅನುವಾದ ಕೃತಿಗಳು, ೬ ಅನುವಾದ ಸಂಬಂಧಿ ಸಂಪಾದಿತ ಕೃತಿಗಳು ಅವರಿಂದ ಹೊರಬಂದಿವೆ. ೬ ಕೃತಿಗಳನ್ನು ಸಂಪಾದಿಸಿದ್ದಾರೆ.ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ಮಂಗಳೂರು ವಿವಿಯಿಂದ ಯಕ್ಷಮಂಗಳ ಕೃತಿ ಪ್ರಶಸ್ತಿ, ಬಿ.ಎಂ. ಶ್ರೀ ಪ್ರತಿಷ್ಟಾನದಿಂದ ಅನಗ ವಿಮರ್ಶಾ ಪ್ರಶಸ್ತಿ ಸೇರಿದಂತೆ ೧೦ಕ್ಕೂ ಹೆಚ್ಚಿನ ಪ್ರಶಸ್ತಿಗಳು ಲಭಿಸಿವೆ.