ಕನ್ನಡ ಸಿನಿಮಾ ಕನ್ನಡಿಗರಿಗೆ ಮಾತ್ರ ಸೀಮಿತವಾಗದಿರಲಿ : ಅನಿಲ್‌ ಕುಂಬ್ಳೆ

| Published : Apr 25 2024, 01:11 AM IST / Updated: Apr 25 2024, 06:04 AM IST

ಕನ್ನಡ ಸಿನಿಮಾ ಕನ್ನಡಿಗರಿಗೆ ಮಾತ್ರ ಸೀಮಿತವಾಗದಿರಲಿ : ಅನಿಲ್‌ ಕುಂಬ್ಳೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸಿನಿಮಾ ಜಾಗತಿಕ ಪ್ರೇಕ್ಷಕರಿಗೆ ತಲುಪಲಿ ಎಂದು ಖ್ಯಾತ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಹೇಳಿದ್ದಾರೆ.

 ಸಿನಿವಾರ್ತೆ

‘ಕನ್ನಡ ಸಿನಿಮಾಗಳು ಜಾಗತಿಕ ಮಟ್ಟಕ್ಕೆ ಹೋಗಬೇಕು. ಕನ್ನಡಿಗರಿಗಷ್ಟೇ ಸೀಮಿತವಾಗಬಾರದು’ ಎಂದು ಅನಿಲ್‌ ಕುಂಬ್ಳೆ ಹೇಳಿದ್ದಾರೆ.

ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ, ಸಮರ್ಜಿತ್‌, ಸಾನ್ಯಾ ಅಯ್ಯರ್‌ ನಟನೆಯ ‘ಗೌರಿ’ ಸಿನಿಮಾದ ಪ್ರಿ ಟೀಸರ್‌ ಲಾಂಚ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಕುಂಬ್ಳೆ ಮಾತನಾಡಿದರು.

‘ಕನ್ನಡ ನಟ, ನಟಿಯರು ತಮ್ಮ ಸರಳತೆ ಹಾಗೂ ಗಾಂಭೀರ್ಯದ ಮೂಲಕ ಗಮನ ಸೆಳೆಯುತ್ತಾರೆ. ನಮ್ಮ ಕಲಾವಿದರು ಈ ನಿಲುವು ರೂಢಿಸಿಕೊಳ್ಳಲು ಚಿತ್ರರಂಗದ ಹಿರಿಯರು ಹಾಕಿಕೊಟ್ಟ ಬುನಾದಿಯೇ ಮುಖ್ಯ ಕಾರಣ. ನಾನು ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿದ್ದಾಗ ಕನ್ನಡ ಸಿನಿಮಾ ನೋಡಲಾಗುತ್ತಿರಲಿಲ್ಲ. ಕನ್ನಡ ಚಿತ್ರಗೀತೆಗಳನ್ನು ಕೇಳದೇ ಇರಲೂ ಆಗುತ್ತಿರಲಿಲ್ಲ. ಆಗೆಲ್ಲ ಹಾಡುಗಳನ್ನು ಡೌನ್‌ಲೋಡ್‌ ಮಾಡಿಕೊಂಡು ನಮ್ಮ ಲ್ಯಾಪ್‌ಟಾಪ್‌ಗೆ ಹಾಕಿ ಕೇಳಬೇಕಿತ್ತು. ಭಾಷೆ ಗೊತ್ತಿಲ್ಲದ ಊರಲ್ಲಿ, ಅನ್ಯ ಭಾಷೆಯ ಸ್ನೇಹಿತರೊಂದಿಗೆ ಕನ್ನಡ ಹಾಡು ಕೇಳುವ ಖುಷಿಯೇ ಬೇರೆಯಿತ್ತು’ ಎಂದೂ ಕುಂಬ್ಳೆ ಹೇಳಿದರು.

ನಾಯಕ ಸಮರ್ಜಿತ್‌, ಕುಂಬ್ಳೆ ಅವರೊಂದಿಗೆ ಸಂತೂರ್‌ ಜಾಹೀರಾತು ಶೂಟ್‌ನಲ್ಲಿ ಭಾಗವಹಿಸಿದ ಸನ್ನಿವೇಶ ಹಂಚಿಕೊಂಡರು. ನಾಯಕಿ ಸಾನ್ಯಾ ಅಯ್ಯರ್‌ ತಮ್ಮ ಪ್ರತಿಭೆ ಗುರುತಿಸಿ ಅವಕಾಶ ನೀಡಿದ ನಿರ್ದೇಶಕರಿಗೆ ವಂದಿಸಿದರು. ನಿರ್ದೇಶಕ ಇಂದ್ರಜಿತ್‌ ಲಂಕೇಶ್‌, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ರಮೇಶ್‌ ರೆಡ್ಡಿ, ಕವಿತಾ ಲಂಕೇಶ್‌ ಕಾರ್ಯಕ್ರಮದಲ್ಲಿದ್ದರು.