ವಾರಭವಿಷ್ಯ

| Published : Mar 10 2024, 01:32 AM IST / Updated: Mar 10 2024, 09:11 AM IST

ಸಾರಾಂಶ

ಮಾ.10ರಿಂದ 16ರವರೆಗೆ ದ್ವಾದಶ ರಾಶಿಗಳ ಶುಭಾಶುಭಗಳನ್ನು ಈ ಕೆಳಕಂಡಂತೆ ವಿಶ್ಲೇಷಿಸಲಾಗಿದೆ.

ಮೇಷರಾಶಿ: ಮಾತಲ್ಲೇ ಎಲ್ಲರನ್ನೂ ನಿಯಂತ್ರಿಸುವ ಶಕ್ತಿ ನಿಮಗಿದೆ. ಆದರೆ ಅದರ ಬಗ್ಗೆ ಅಹಂ ಭಾವ ಬೇಡ. ಏಕೆಂದರೆ ಅಹಂಗೆ ಘಾಸಿಯಾದಾಗ ನೀವು ಆಡುವ ಮಾತು ಜನರಿಗೆ ನಿಮ್ಮ ಬಗ್ಗೆ ವಿರುದ್ಧ ಭಾವ ಮೂಡುವಂತೆ ಮಾಡಬಹುದು. ಚಿನ್ನ ಬೆಳ್ಳಿ ಆಭರಣ ಖರೀದಿಸುವ ಯೋಗ ಇದೆ.

ಕೊಂಚ ಶೀತ ಕಾಡಬಹುದು. ಬಂಧುಗಳಿಂದ ಖರ್ಚು ಹೆಚ್ಚಾಗಬಹುದು. ವಿದ್ಯೆ ಅಥವಾ ಅದಕ್ಕೆ ಪೂರಕವಾದ ಸಂಗತಿಗೆ ಹಣ ಖರ್ಚಾಗಬಹುದು. ಆದರೆ ಹಾಗೆ ಖರ್ಚಾದ ಹಣ ಮತ್ತೆ ಅಷ್ಟೇ ಪ್ರಮಾಣದಲ್ಲೇ ವಾಪಾಸು ಬರುತ್ತದೆ. ನಿಮಗೀಗ ರಾಜಯೋಗವಿದೆ. ಭೂಮಿ ಖರೀದಿಗೆ ಸಕಾಲ. 

ವೃಷಭರಾಶಿ: ನಿಮ್ಮ ಮೇಲಧಿಕಾರಿಗಳಿಂದ ನಿಮಗೆ ಉತ್ತಮ ಬೆಂಬಲ ದೊರೆಯುತ್ತದೆ. ಇದರಿಂದ ನೀವು ಔದ್ಯೋಗಿಕವಾದ ಪ್ರಗತಿ ಸಾಧಿಸುವುದು ಸಾಧ್ಯವಾಗುತ್ತದೆ. ವೃತ್ತಿಪರವಾದ ಈ ಬೆಳವಣಿಗೆಯಿಂದ ಮಾನಸಿಕ ತೃಪ್ತಿ ಇದೆ. ಚಿನ್ನ ಬೆಳ್ಳಿ, ಆಭರಣಗಳಿಗಾಗಿ ಖರ್ಚು ಮಾಡುತ್ತೀರಿ. 

ನಾನಾ ಮೂಲಗಳಿಂದ ಧನಲಾಭ‌ ಇದೆ. ಈ ಎಲ್ಲ ಧನಾತ್ಮಕ ಅಂಶಗಳಿಂದ ಮನಸ್ಸಿಗೆ ನೆಮ್ಮದಿ ಎನಿಸುತ್ತದೆ. ಭಾಗ್ಯಸ್ಥಾನದಲ್ಲಿರುವ ಕೆಲವು ಗ್ರಹಗಳಿಂದ ನಿಮ್ಮ ಸಂಸಾರದಲ್ಲೂ ಸುಖ, ಸಂತೋಷ, ಸಮೃದ್ಧಿ ದೊರೆಯುತ್ತದೆ. ವಾಹನ ಚಾಲನೆಯಲ್ಲಿ ಎಚ್ಚರ ಅಗತ್ಯ.

ಮಿಥುನರಾಶಿ: ಗುರು ಚಂದ್ರ ಗ್ರಹಗಳು ಹನ್ನೊಂದನೇ ಮನೆಯಲ್ಲಿ ಇರುವುದು ನಿಮಗೆ ಅಪರಿಮಿತ ಲಾಭ ತಂದುಕೊಡುತ್ತದೆ. ತಾಯಿಯಿಂದ ಸಹಾಯ ಸಿಗುತ್ತದೆ. ಗುರು ಇನ್ನು ಕೆಲವೇ ತಿಂಗಳು ನಿಮಗೆ ಪೂರಕವಾಗಿ ಇರುತ್ತಾನೆ. ಆದಷ್ಟು ಬೇಗ ಬೇಗ ನಿಮ್ಮ ಮಹತ್ವದ ಕೆಲಸಗಳನ್ನು ಮುಗಿಸಿಕೊಳ್ಳಿ. 

ಮದುವೆ, ವೃತ್ತಿಗೆ ಸಂಬಂಧ ಪಟ್ಟಹಾಗೆ, ವ್ಯವಹಾರ, ಆಸ್ತಿ ಖರೀದಿ, ಕೋರ್ಟ್ ಕಟ್ಟಳೆಗಳು ಯಾವುದಿದ್ದರೂ ಶೀಘ್ರ ತೀರ್ಮಾನ‌ ತೆಗೆದುಕೊಳ್ಳಿ. ಗುರುಬಲ ಮುಗಿದರೆ ಕೆಲಸಗಳು ನಿಧಾನ‌ಗತಿ‌ಯಲ್ಲಿ ನಡೆಯಬಹುದು. ಪ್ರಯಾಣ ನಿಮ್ಮ ಖುಷಿ ಹೆಚ್ಚಿಸಲಿದೆ.

ಕಟಕರಾಶಿ: ಕೆಲಸದಲ್ಲಿ ಒತ್ತಡ ಹೆಚ್ಚಿರುವುದು ನಿಮ್ಮಲ್ಲಿ ಅಸಹನೆ ಹೆಚ್ಚಿಸಬಹುದು. ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಸರಿಯಾದ ಪ್ರಗತಿ ಸಿಗದೇ ಇರುವುದೂ ನಿಮ್ಮ ಆತ್ಮವಿಶ್ವಾಸಕ್ಕೆ ಎಲ್ಲೋ ಒಂದು ಕಡೆ ಘಾಸಿ ಮಾಡಿರಬಹುದು. ಆದರೆ ಇವೆಲ್ಲ ಕ್ಷಣಿಕ. ಈಗ ಏನೇನು ಸಮಸ್ಯೆಗಳನ್ನು ಅನುಭವಿಸುತ್ತಿದ್ದಿರೋ ಅವೆಲ್ಲಕ್ಕೂ ಪರಿಹಾರಗಳು ಸಿಗುತ್ತದೆ. 

ಈ ವರೆಗೆ ಅನುಭವಿಸಿದ ಕಷ್ಟಕೋಟಲೆಗಳಿಗೆ ಒಂದು ಮುಕ್ತಾಯ ಸಿಗುತ್ತದೆ. ಸಕಾರಾತ್ಮಕ ಬೆಳವಣಿಗೆ ನಿಮ್ಮ‌ ಅನುಭವಕ್ಕೇ ಬರುತ್ತದೆ. ಈ ವಾರದ ಮಧ್ಯಭಾಗದಲ್ಲಿ ವೃತ್ತಿಯಲ್ಲಿ ಒಂದು ಶುಭಕರ ಬದಲಾವಣೆ ಇದೆ.

ಸಿಂಹರಾಶಿ: ಏಳನೇ ಮನೆಯಲ್ಲಿ ಶುಕ್ರ ಶನಿ ಹಾಗೂ ಸೂರ್ಯ ಇದ್ದು ನಿಮ್ಮ ರಾಶಿಯನ್ನು ನೋಡುವುದರಿಂದ ನಿಮಗೆ ಆರೋಗ್ಯ ಕೊಂಚ ಏರುಪೇರಾಗಬಹುದು ಮತ್ತು ಕೋಪ ಹೆಚ್ಚಾಗಬಹುದು. ಮುಖ್ಯ ಕೆಲಸ ಕಾರ್ಯಗಳನ್ನು ಬೇಗ ಮಾಡಿಕೊಳ್ಳಿ. ಮುಂದೆ ಗುರುಬಲ‌ ಕಳೆದು ಹೋದರೆ ಕೆಲಸಗಳು ನಿಧಾನವಾಗುತ್ತದೆ. 

ಶ್ರಮ ಹೆಚ್ಚು ಬೇಡುತ್ತದೆ. ಆರೋಗ್ಯ ಕೊಂಚ ಏರುಪೇರಾಗಬಹುದು ಮತ್ತು ಕೋಪ ಹೆಚ್ಚಾಗಬಹುದು. ಚಂದ್ರ ಹಾಗೂ ಗುರು ಗ್ರಹಗಳಿಂದಾಗಿ ನಿಮ್ಮ ಭಾಗ್ಯಗಳು ಹೆಚ್ಚಬಹುದು. ಒತ್ತಡವನ್ನು ನಿಭಾಯಿಸುವುದನ್ನು ಕಲಿಯಿರಿ.

ಕನ್ಯಾರಾಶಿ: ಆರನೇ ಮನೆಯ ಶನಿ ಸೂರ್ಯ ಮತ್ತು ಶುಕ್ರ ನಿಮ್ಮ ಮನಸ್ಸಿಗೆ ಸಂತೋಷ ಕೊಡುತ್ತಾರೆ. ಮುಂದೆ ಗುರುಬಲ‌ ಪ್ರಾಪ್ತಿಯಾಗಿ ನಿಮಗೆ ಸುಖ ನೆಮ್ಮದಿ ಸಿಗುತ್ತದೆ. ಎಂಟನೇ ಮನೆಯಲ್ಲಿ ಗುರು ಚಂದ್ರ ಋಣಾತ್ಮಕ ಭಾವವನ್ನು ಹೆಚ್ವಿಸುತ್ತಾರೆ. ಮಾನಸಿಕ ಅಸಮತೋಲನ ಮನಸ್ಸಿಗೆ ಕಿರಿಕಿರಿ ಇರುತ್ತದೆ. 

ಜೊತೆಗೆ ಮಾತಿನ ಬಗ್ಗೆ ಎಚ್ಚರ ಇರಲಿ. ನಡೆ ನುಡಿ, ವ್ಯವಹಾರಗಳಲ್ಲಿ ಜಾಗರೂಕತೆಯಿಂದ ಇರಿ. ಆಗಾಗ ಸಂತೋಷ, ಒಮ್ಮೊಮ್ಮೆ ಬೇಸರ, ಕೆಲವೊಮ್ಮೆ ನಿರ್ಲಿಪ್ತ ಭಾವ ಈ ವಾರದಲ್ಲಿ ನಿಮ್ಮನ್ನು ಕೊಂಚ ವಿಚಲಿತಗೊಳಿಸಬಹುದು.

ತುಲಾರಾಶಿ: ಯಾರೂ ಈಗ ನಿಮ್ಮನ್ನು ಬೀಳಿಸಲು ಸಾಧ್ಯವಿಲ್ಲ. ಯಾವ ಅಡೆತಡೆಗಳು ನಿಮ್ಮನ್ನು ಮುರಿಯಲು ಸಾಧ್ಯವಾಗದು. ಶತ್ರುಗಳು ದೂರವಾಗುತ್ತಾರೆ. ‌ಜೊತೆಗೆ ನಿಮ್ಮ ಬದುಕಿನಲ್ಲಿ ಇದು ಬದಲಾವಣೆಯ ಸಂಧಿಕಾಲ. ಕೆಲಸ ಬದಲಾವಣೆಯ ಸಾಧ್ಯತೆಗಳಿವೆ. ಇದನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಿ.‌ 

ಭೂಮಿಯಿಂದ ಲಾಭ, ವ್ಯವಸಾಯದಿಂದ ಆದಾಯ ಹೆಚ್ಚುವ ಸಾಧ್ಯತೆ ಇದೆ. ಮಾನಸಿಕ ಶಕ್ತಿಯನ್ನು ಇನ್ನಷ್ಟು ಸ್ಟ್ರಾಂಗ್‌ ಆಗಲಿದೆ. ಇದರ ಜೊತೆಗೆ ಧನಲಾಭವೂ ಸಿಗಲಿದೆ. ಇತರರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಬಗ್ಗೆ ನೀವು ತಲೆಕೆಡಿಸಿಕೊಂಡರೆ ಸಾಕು.

ವೃಶ್ಚಿಕ ರಾಶಿ: ಋಣಾತ್ಮಕ ಸಂಗತಿಗಳು ಕೆಲವೇ ದಿನಗಳಲ್ಲಿ ಕಡಿಮೆಯಾಗಿ ಮನಸ್ಸಿಗೆ ಸಂತೋಷ ಸಿಗುತ್ತದೆ. ಕೆಲವು ದಿನಗಳಲ್ಲಿ ಗುರುಬಲ ಬಂದು ನಿಮ್ಮ ಚಿಂತೆಗಳೆಲ್ಲ ದೂರವಾಗುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ಮೂರರಲ್ಲಿ ಕುಜ ನಾಲ್ಕರಲ್ಲಿ ಶುಕ್ರ ಸೂರ್ಯ ಶನಿ, ಐದರಲ್ಲಿ ಬುಧ ಸಮಯ ಅನುಕೂಲವಾಗಿದೆ. 

ಲಾಭಸ್ಥಾನದ ಕೇತು ಧನಲಾಭ ಕೊಡುತ್ತಾನೆ. ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತಾನೆ. ‌ಷೇರು ವ್ಯವಹಾರಗಳಲ್ಲಿ ಲಾಭವಿದೆ. ವಾಹನದಿಂದ ಲಾಭ ಇದೆ. ಭೂಮಿಯಿಂದ ಲಾಭ ಇದೆ.‌ ಸಹೋದರರ ಸಹಾಯ ಬೆಂಬಲ ಸಿಗುತ್ತದೆ.

ಧನಸ್ಸುರಾಶಿ: ಸಹೋದರ ವರ್ಗದಿಂದ ಲಾಭ‌ ಇದೆ. ವಾಹನದಿಂದ ಲಾಭ ಇದೆ. ಭೂಮಿಯಿಂದ ಲಾಭ ಇದೆ. ವೈಯಕ್ತಿಕ ಜೀವನ ಹಾಗೂ ವೃತ್ತಿ ಎರಡರಲ್ಲೂ ಒಳ್ಳೆಯ ಸಂಗತಿಗಳಿವೆ. ಸಮಯ ಈಗ ನಿಮಗೆ ಬಹಳ ಚೆನ್ನಾಗಿದೆ. ಎಂಥಾ ಕಡುಕಷ್ಟದ ಕೆಲಸವನ್ನಾದರೂ ಲೀಲಾಜಾಲವಾಗಿ ಮಾಡುವ ಹುಮ್ಮಸ್ಸು ಶಕ್ತಿ ಇರುತ್ತದೆ. 

ಜಗತ್ತೆಲ್ಲ ನಿಮ್ಮ ಕೈಯಲ್ಲಿ ಇರುವಂತೆ ಭಾಸವಾಗಬಹುದು. ಯಾವುದೇ ಕೆಲಸವಾಗಲೀ ಸಮಸ್ಯೆಯಾಗಲೀ ಚಿಟಿಕೆ ಹೊಡೆಯುವುದರಲ್ಲಿ ಪರಿಹಾರ ಆಗುತ್ತದೆ. ಈ ಸದವಕಾಶವನ್ನು ಉತ್ತಮ ಬೆಳವಣಿಗೆಗೆ ಸಹಕಾರಿಯಾಗುವಂತೆ ಬಳಸಿಕೊಳ್ಳಿ.

ಮಕರರಾಶಿ: ನೀವು ಕಳೆದು ಕೊಂಡ ನೆಮ್ಮದಿ ನಿಮಗೆ ಮತ್ತೆ ಸಿಗಲಿದೆ. ಇನ್ನು ಏರುವ ಹಾದಿಯಲ್ಲಿ ಸಾಗಲಿದ್ದೀರಿ. ಕೆಲವೇ ಕೆಲವು ದಿನಗಳು ಕಾಯಬೇಕು. ವೃತ್ತಿಯಲ್ಲಿ ವೈಯಕ್ತಿಕ ಜೀವನದಲ್ಲಿನ ಸಮಸ್ಯೆ, ಕಷ್ಟಗಳಿಗೆ ಪರಿಹಾರ ಸಿಗಲಿದೆ. ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.‌ 

ಇನ್ನು ಕೆಲವೇ ದಿನಗಳಲ್ಲಿ‌ ಭಾಗ್ಯೋದಯವಾಗುವ ಸಮಯ. ‌ನೀವು ಇಷ್ಟಪಡುವ ವೃತ್ತಿ, ವೃತ್ತಿಯಲ್ಲಿ ಬಡ್ತಿ, ಅವಿವಾಹಿತರಿಗೆ ವಿವಾಹ ಎಲ್ಲವೂ ಇದೆ. ನಿಂತ ನೀರಾಗಿದ್ದ ಜೀವನದಲ್ಲಿ ಚಲನೆ ಕಂಡುಬರುತ್ತದೆ. ಇನ್ನು ಕೆಲವೇ ದಿನಗಳಲ್ಲಿ ಒಂದು ಒಳ್ಳೆಯ ಬದಲಾವಣೆ ಇದೆ.

ಕುಂಭರಾಶಿ: ನಿಮ್ಮ ಪಾಲಿಗೆ ಈ ವಾರ ಮಿಶ್ರವಾಗಿರಲಿದೆ. ಬಂಧುಗಳ ನಡುವೆ ನಿಷ್ಠುರ ಅನುಭವಿಸುವಿರಿ. ಮನೆಯಲ್ಲಿ ಕಿರಿಕಿರಿ ವೃತ್ತಿಯಲ್ಲೂ ಸಮಾಧಾನ‌ ಇಲ್ಲದ ಪರಿಸ್ಥಿತಿ ಮುಂದುವರಿಯುತ್ತದೆ. ಹಾಗೆ ನೋಡಿದರೆ ಇದು ನಿಮಗೆ ಕೊಂಚ ಗಂಭೀರ ಸಮಯವೇ ಆಗಿದೆ. ನೀವು ಅಂದುಕೊಂಡ ಯೋಜನೆಗಳು ಉಲ್ಟಾ ಪುಲ್ಟಾ ಆಗಬಹುದು. 

ಹಣಕಾಸಿನ ಮುಗ್ಗಟ್ಟು ದಿಢೀರನೆ ಎದುರಾಗಬಹುದು. ಭೂಮಿ ವ್ಯವಹಾರದಲ್ಲಿ ನಷ್ಟ ಸಾಧ್ಯತೆ ಇದೆ. ರಾಶಿಯಲ್ಲೇ ಶನಿ ಇರುವುದರಿಂದ ಸಾಡೆಸಾತಿಯ ಪ್ರಭಾವ ಇನ್ನೂ ಇದೆ.‌ ನಿರ್ಲಿಪ್ತ ಭಾವ, ಆಶಾವಾದಗಳಲ್ಲಿರಿ.

ಮೀನರಾಶಿ: ಆದರೆ ಈಗ ಗುರುಬಲ ಮತ್ತು ಕುಜ ಬಲ ಇದೆ. ಕೊಂಚಮಟ್ಟಿಗೆ ಅನುಕೂಲಗಳೂ ಇವೆ. ಇನ್ನು ಕೆಲವು ದಿನಗಳಲ್ಲಿ ಹಣಕಾಸು ಸ್ಥಿತಿ ಏರುಪೇರಾಗುತ್ತದೆ.‌ ಶನಿ ಸೂರ್ಯ ಹಾಗೂ ಶುಕ್ರ 12 ನೇ ಮನೆಯಲ್ಲಿ ಇರುವುದರಿಂದ ಖರ್ಚುಗಳೂ ಸಾಕಷ್ಟು ಇವೆ. ಹಣಕಾಸಿನ ಪರಿಸ್ಥಿತಿಯನ್ನು ನಿಭಾಯಿಸಲಾಗದೆ ಬಳಲುತ್ತೀರಿ. 

ಆರೋಗ್ಯ ಕೂಡ ತೊಂದರೆ ಕೊಡಬಹುದು. ಸಲೀಸಾಗಿ ಆಗುವ ಕೆಲಸಗಳು ಈಗ ಹೆಚ್ಚು ಶ್ರಮ‌ ಬೇಡುತ್ತದೆ. ಬಹಳ ಬುದ್ಧಿವಂತಿಕೆಯಿಂದ ಮಾಡಬೇಕು.‌ ಸಂಗಾತಿಯ ಜೊತೆಗೆ ನಿಮ್ಮ ಸಮಸ್ಯೆ ಹಂಚಿಕೊಳ್ಳಿ. ಕೊಂಚ ನಿರಾಳವಾಗಬಹುದು.