ಸಾರಾಂಶ
ಕಲಬುರಗಿ: ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರದಿಂದ ದಲಿತರು, ರೈತರಿಗೆ ಅನ್ಯಾಯ ಆಗಿದೆ. ರಾಜ್ಯದಲ್ಲಿರೋದು ರೈತ ಮತ್ತು ದಲಿತ ವಿರೋಧಿ ಸರ್ಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದರು.
ನಗರದಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬೃಹತ್ ರೋಡ್ ಶೋದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾಂಗ್ರೆಸ್ ಸರ್ಕಾರವು ಎಸ್ಸಿ, ಎಸ್ಟಿ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಈ ಸಮುದಾಯಗಳಿಗೆ ಮೀಸಲಿಟ್ಟಿದ್ದ ಅನುದಾನವನ್ನು ಬೇರೆಡೆಗೆ ವರ್ಗಾಯಿಸಿದೆ. ಹೀಗಾಗಿ ಈ ಸಮುದಾಯದವರು ಇದೀಗ ಕಾಂಗ್ರೆಸ್ ವಿರೋಧಿಯಾಗಿ ಬದಲಾಗಿದ್ದಾರೆಂದು ಹೇಳಿದರು.
ಇನ್ನು ಕೇಂದ್ರ ಸರ್ಕಾರದಿಂದ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಸಿಗುತ್ತಿದ್ದ ನಾಲ್ಕು ಸಾವಿರ ರುಪಾಯಿಯನ್ನೂ ತಪ್ಪಿಸಿ ರಾಜ್ಯ ಸರ್ಕಾರ ಅನ್ನದಾತರಿಗೆ ಅನ್ಯಾಯ ಮಾಡಿದೆ. ಇದರ ಜತೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಗೂಂಡಾಗಿರಿಯೂ ಹೆಚ್ಚಾಗಿದೆ. ಹಿಂದೂಗಳ, ಬಿಜೆಪಿ ಕಾರ್ಯಕರ್ತರ ಹತ್ಯೆಗಳು ಆಗುತ್ತಿವೆ ಎಂದು ಆರೋಪಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕೂಡ ಅವರು ದೇಶದ ಭವಿಷ್ಯ, ದೇಶದ ಭದ್ರತೆ, ದೇಶದ ರಕ್ಷಣೆ ದೃಷ್ಟಿಯಿಂದ ಇದೀಗ ಬಿಜೆಪಿಗೆ ಸಾಥ್ ನೀಡಿದ್ದಾರೆ. ಇದರಿಂದಾಗಿ ಈ ಬಾರಿ ರಾಜ್ಯದಲ್ಲಿ ಎಲ್ಲಾ 28 ಲೋಕಸಭಾ ಸ್ಥಾನಗಳಲ್ಲೂ ಎನ್ಡಿಎ ಗೆಲುವು ಸಾಧಿಸುವುದು ನಿಶ್ಚಿತ ಎಂದರು.
ಈ ಹಿಂದೆ ಕಲಬುರಗಿಯು ಕಾಂಗ್ರೆಸ್ ಭದ್ರಕೋಟೆ ಆಗಿತ್ತು. ಕಳೆದ ಎಲೆಕ್ಷನ್ ನಲ್ಲಿ ಈ ಭದ್ರಕೋಟೆ ಛಿದ್ರ ಆಗಿದೆ. ಈ ಬಾರಿಯೂ ಆ ಭದ್ರಕೋಟೆ ಮತ್ತೊಮ್ಮೆ ಛಿದ್ರ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.