ಯು.ಪಿ.ಎಂ.ಸಿ.: ಬೃಹತ್ ರಕ್ತದಾನ ಶಿಬಿರ

| Published : Apr 28 2024, 01:27 AM IST

ಸಾರಾಂಶ

ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿಗಳಾದ ಡಾ.ದೀಪಿಕಾ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ರಕ್ತದಾನದ ಬಗ್ಗೆ ಅರಿವು ಮೂಡಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಉಡುಪಿ ಫ್ರೆಂಡ್ಸ್ ಗ್ರೂಪ್ ಜಂಟಿಯಾಗಿ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಶನಿವಾರ ನಡೆಯಿತು.

ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿಗಳಾದ ಡಾ.ದೀಪಿಕಾ ಕಾರ್ಯಕ್ರಮ ಉದ್ಘಾಟಿಸಿ, ರಕ್ತಕ್ಕೆ ಪರ್ಯಾಯ ಎಂಬುದು ಇಲ್ಲ. ಆರೋಗ್ಯವಂತ ವ್ಯಕ್ತಿ ಯಾವುದೇ ಪ್ರತಿಫಲ ಅಪೇಕ್ಷೆಯಿಲ್ಲದೆ ರಕ್ತದಾನ ಮಾಡಬೇಕು. ಒಂದು ಬಾರಿ ರಕ್ತದಾನದಿಂದ 3-4 ಮಂದಿ ರೋಗಿಗಳ ಜೀವ ಉಳಿಸಲು ಸಹಕಾರಿಯಾಗುತ್ತದೆ. ಮಾರಕ ರೋಗಗಳಿಂದ ಬಳಲುತ್ತಿರುವವರಿಗೆ ರಕ್ತವು ಅತ್ಯವಶ್ಯವಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಮಾಜವು ಮಾಡುವ ಸ್ವಯಂ ಪ್ರೇರಿತ ರಕ್ತದಾನವು ಅತ್ಯಮೂಲ್ಯವಾಗಿದೆ ಎಂದು ಹೇಳಿದರು.

ಫ್ರೆಂಡ್ಸ್ ಕ್ಲಬ್ ಉಡುಪಿ ಇದರ ಗೌರವಾಧ್ಯಕ್ಷ ವಸಂತ ರಾವ್ ಕರಂಬಳ್ಳಿ, ಅಧ್ಯಕ್ಷರಾದ ಸಂದೀಪ್, ಸುನಿಲ್ ಹಾಗೂ ಫ್ರೆಂಡ್ಸ್ ಗ್ರೂಪ್‌ನ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯರಾದ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್. ಘಟಕದ ಸಹ ಯೋಜನಾಧಿಕಾರಿ ಚಂದ್ರಶೇಖರ್ ವಂದಿಸಿದರು. ಯೋಜನಾಧಿಕಾರಿ ರಾಜೇಶ್ ಕುಮಾರ್ ಸ್ವಾಗತಿಸಿ, ನಿರೂಪಿಸಿದರು.