1 ತಿಂಗಳ ರಿಸಲ್ಟ್‌ ಕುತೂಹಲ!

| Published : May 08 2024, 01:32 AM IST

ಸಾರಾಂಶ

ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಾಗೂ ಅಂತಿಮ ಹಂತದ ಮತದಾನವು ಕೆಲ ಲೋಪದೋಷಗಳು, ಮತದಾನ ಬಹಿಷ್ಕಾರವನ್ನು ಹೊರತುಪಡಿಸಿ ಶಾಂತಿಯುತವಾಗಿ ಮಂಗಳವಾರ ಮುಕ್ತಾಯಗೊಂಡಿತು. ಇನ್ನು ಫಲಿತಾಂಶಕ್ಕಾಗಿ ಹೆಚ್ಚೂ ಕಡಮೆ ಒಂದು ತಿಂಗಳ ಕಾಲ ಕಾಯಬೇಕಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಾಗೂ ಅಂತಿಮ ಹಂತದ ಮತದಾನವು ಕೆಲ ಲೋಪದೋಷಗಳು, ಮತದಾನ ಬಹಿಷ್ಕಾರವನ್ನು ಹೊರತುಪಡಿಸಿ ಶಾಂತಿಯುತವಾಗಿ ಮಂಗಳವಾರ ಮುಕ್ತಾಯಗೊಂಡಿತು. ಇನ್ನು ಫಲಿತಾಂಶಕ್ಕಾಗಿ ಹೆಚ್ಚೂ ಕಡಮೆ ಒಂದು ತಿಂಗಳ ಕಾಲ ಕಾಯಬೇಕಾಗಿದೆ.

ಬಿರುಬಿಸಿಲಿನ ನಡುವೆಯೂ ವಯೋವೃದ್ಧರು, ಶತಾಯುಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಎರಡನೇ ಹಂತದ ಮತದಾನದಲ್ಲಿ ಭಾಗಿಯಾಗಿರುವುದು ಗಮನ ಸೆಳೆಯಿತು.

ಮಂಗಳವಾರ ರಾಜ್ಯದ 14 ಕ್ಷೇತ್ರಗಳಿಗೆ ನಡೆದ ಎರಡನೇ ಹಂತದ ಮತದಾನದಲ್ಲಿ ಘಟಾನುಘಟಿ ನಾಯಕರು ಸೇರಿ 227 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಡೆದ ಮತದಾನದ ವೇಳೆ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆದಿದ್ದಾರೆ. 2019ರ ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ನಡೆದ ಮತದಾನ ಪ್ರಮಾಣಕ್ಕಿಂತ ಈ ಬಾರಿ ಶೇಕಡಾವಾರು ಪ್ರಮಾಣದಲ್ಲಿ ಅಧಿಕವಾಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಶೇ.68.66ರಷ್ಟು ಮತದಾನ ಪ್ರಮಾಣವಾಗಿದ್ದರೆ, ಈ ಬಾರಿ ಶೇ.70ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ.

ರಾಜ್ಯದಲ್ಲಿ ನಡೆದ ಮೊದಲ ಹಂತದ ಚುನಾವಣೆಗಿಂತ (68%) ಎರಡನೇ ಹಂತದ ಚುನಾವಣೆಯಲ್ಲಿ ಮತದಾರರು ಹೆಚ್ಚಿನ ಉತ್ಸಾಹದಲ್ಲಿ ಭಾಗಿಯಾಗಿದ್ದಾರೆ. ವೃದ್ಧರು, ಶತಾಯುಷಿಗಳು ಹುಮ್ಮಸ್ಸಿನಿಂದ ತಮ್ಮ ಹಕ್ಕು ಚಲಾಯಿಸಿದ ದೃಶ್ಯ ಕಂಡು ಬಂತು. ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಕ್ಷೇತ್ರದಲ್ಲಿ ಮತದಾನ ನಡೆಯಿತು. ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪ್ರಭಾ ಮಲ್ಲಿಕಾರ್ಜುನ್, ಗಾಯತ್ರಿ ಸಿದ್ದೇಶ್ವರ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸೇರಿದಂತೆ 227 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ತೀರ್ಮಾನವಾಗಿದ್ದು, ಜೂ.4ರಂದು ಫಲಿತಾಂಶ ಪ್ರಕಟವಾಗಲಿದೆ.

ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾದಾಗ ಮತಗಟ್ಟೆ ಆವರಣದಲ್ಲಿ ಸರತಿ ಸಾಲಿನಲ್ಲಿ ನಿಂತಿರುವವರಿಗೆ ಮಾತ್ರ ಮತದಾನಕ್ಕೆ ಅವಕಾಶ ನೀಡಲಾಯಿತು. ಮತಗಟ್ಟೆಯಲ್ಲಿರುವವರು ಮತ ಹಾಕಿದ ಬಳಿಕ ಚುನಾವಣಾ ಸಿಬ್ಬಂದಿ ಮತಯಂತ್ರಗಳನ್ನು ಮುಚ್ಚಿ ಬಿಗಿ ಭದ್ರತೆಯಲ್ಲಿ ಸ್ಟ್ರಾಂಗ್ ರೂಮ್​ಗೆ ಕೊಂಡೊಯ್ದರು.

ಮಂಗಳವಾರ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ನಿಧನವಾಗಿ ಆರಂಭಗೊಂಡಿತು. ಬೆಳಗ್ಗೆ 9 ಗಂಟೆಗೆ ಚುನಾವಣಾ ಆಯೋಗವು ಶೇಕಡಾವಾರು ಪ್ರಕಟಿಸಿದಾಗ ಶೇ.9.45ರಷ್ಟು ಇತ್ತು. ನಂತರ ಮತದಾನ ಬಿರುಸುಗೊಂಡು 11 ಗಂಟೆಯ ಶೇಕಡಾವಾರು ಪ್ರಮಾಣ 24.48ರಷ್ಟಾಯಿತು. ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇ.41.59ರಷ್ಟು, 3 ಗಂಟೆಯ ಹೊತ್ತಿಗೆ ಶೇ.54.203ರಷ್ಟು, ಸಂಜೆ 5ಕ್ಕೆ ಶೇ.66.05 ಮತ್ತು ಮತದಾನ ಮುಕ್ತಾಯಗೊಂಡಾಗ ಶೇ.70ಕ್ಕೂ ಹೆಚ್ಚಿನ ಮತದಾನವಾಗಿತ್ತು.

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಜಗದೀಶ್‌ ಶೆಟ್ಟರ್, ಬಸವರಾಜ ಬೊಮ್ಮಾಯಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಚಿವರಾದ ಪ್ರಿಯಾಂಕ್‌ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್‌, ಈಶ್ವರ್‌ ಖಂಡ್ರೆ, ಎಂ.ಬಿ.ಪಾಟೀಲ್‌ ಸೇರಿದಂತೆ ಇತರೆ ಸಚಿವರು, ಶಾಸಕರು, ಸಂಸದರು ಸೇರಿದಂತೆ ವಿವಿಧ ಗಣ್ಯರು ಮತಗಟ್ಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದರು.

ಮತದಾನ ಬಹಿಷ್ಕಾರ:

ಎರಡನೇ ಹಂತದಲ್ಲಿಯೂ ಮತದಾನ ಬಹಿಷ್ಕಾರ ಮಾಡಿರುವ ಘಟನೆಗಳು ಕೆಲವೆಡೆ ನಡೆದಿವೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ವಿಠಲಾಪುರ ಬಡಾವಣೆ ನಿವಾಸಿಗಳು ಮತದಾನ ಬಹಿಷ್ಕಾರ ಮಾಡಿದ್ದಾರೆ. ಇತ್ತೀಚೆಗೆ ವೈದ್ಯರ ನಿರ್ಲಕ್ಷ್ಯದಿಂದ ತಾಯಿ-ಮಗು ಮೃತಪಟ್ಟಿದ್ದಾರೆ ಎಂಬ ಆರೋಪ ಇದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಡಾವಣೆ ನಿವಾಸಿಗಳು ಮತದಾನ ಬಹಿಷ್ಕರಿಸಿದರು.

ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ 19ನೇ ವಾರ್ಡ್​ ಜನರು ಮತದಾನ ಬಹಿಷ್ಕರಿಸಿದರು. ಪಟ್ಟಣದ ಗುದ್ನೇಪ್ಪನಮಠದ ದೇವಸ್ಥಾನದ ಜಾಗದಲ್ಲಿ ಸರ್ಕಾರಿ ಕಟ್ಟಡ ನಿರ್ಮಿಸುವ ಆದೇಶ ಹಿಂಪಡೆಯಬೇಕು ಎಂದು ಮತದಾನ ಬಹಿಷ್ಕಾರ ಮಾಡಿದ್ದರು.

ವಿದೇಶದಿಂದ ಆಗಮಿಸಿ ಮತ ಚಲಾವಣೆ:

ಅನೇಕ ಮತದಾರರು ವಿದೇಶದಿಂದ ಆಗಮಿಸಿ ತಮ್ಮ ಹಕ್ಕು ಚಲಾವಣೆ ಮಾಡಿದರು. ಇಂಗ್ಲೆಂಡ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅಭಿಷೇಕ್ ಲೋಕಿಕೆರೆ ದಾವಣಗೆರೆಯಲ್ಲಿ ಮತಚಲಾಯಿಸಿದರು. ರಾಘವೇಂದ್ರ ಕಮಲಕರ್ ಶೇಠ್ ಎಂಬುವರು ಅಮೆರಿಕದಿಂದ ಕುಟುಂಬ ಸಮೇತ ಆಗಮಿಸಿ ಮತಚಲಾವಣೆ ಮಾಡಿದರು. ರೀತು ಹಾಗೂ ರಕ್ಷಾ ಎಂಬುವವರು ಸಹ ಅಮೆರಿಕದಿಂದ ದಾವಣಗೆರೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ಕಳೆದ 10 ವರ್ಷಗಳಿಂದ ಅಬುಧಾಬಿಯಲ್ಲಿರುವ ಯುವಕ ಸೂರಜ್ ಉಪಾಶೆ ಎಂಬಾತ ಮತದಾನಕ್ಕಾಗಿ ತಾಯ್ನಾಡಿಗೆ ಆಗಮಿಸಿ ಹುಕ್ಕೇರಿಯಲ್ಲಿ ಮತದಾನ ಮಾಡಿದರು.