ರಂಗಭೂಮಿ ವಾಸ್ತವ ಬದುಕಿನ ಅಭಿವ್ಯಕ್ತಿ: ಸಂದೀಪ್‌

| Published : Apr 25 2024, 01:06 AM IST

ಸಾರಾಂಶ

ರಂಗಭೂಮಿ ವಾಸ್ತವ ಬದುಕಿನ ಅಭಿವ್ಯಕ್ತಿ. ರಂಗಭೂಮಿಯಿಂದ ಯಾವ ಕಲೆಗಳೂ ಹೊರತಾಗಿಲ್ಲ. ಸಂಗೀತ, ನಾಟಕ, ನೃತ್ಯ ಮುಂತಾದ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ರಂಗಭೂಮಿ ಹಾಸುಹೊಕ್ಕಾಗಿದೆ.

ಚಿತ್ರದುರ್ಗ: ರಂಗಭೂಮಿ ವಾಸ್ತವ ಬದುಕಿನ ಅಭಿವ್ಯಕ್ತಿ. ರಂಗಭೂಮಿಯಿಂದ ಯಾವ ಕಲೆಗಳೂ ಹೊರತಾಗಿಲ್ಲ. ಸಂಗೀತ, ನಾಟಕ, ನೃತ್ಯ ಮುಂತಾದ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ರಂಗಭೂಮಿ ಹಾಸುಹೊಕ್ಕಾಗಿದೆ. ಪ್ರಶಿಕ್ಷಣಾರ್ಥಿಗಳು ರಂಗಭೂಮಿಯ ಪ್ರತಿಯೊಂದೂ ಅಂಶಗಳನ್ನು ಕಲಿಯಬೇಕು ಎಂದು ಮದಕರಿನಾಯಕ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಸಂದೀಪ್ ಅಭಿಪ್ರಾಯಪಟ್ಟರು.

ರಂಗಸೌರಭ ಕಲಾ ಸಂಘವತಿಯಿಂದ ನಗರದ ಕೋಟೆ ಮುಂಭಾಗವಿರುವ ಹೇಮಾವತಿ ಕುವೆಂಪು ಶಿಕ್ಷಣ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ದ್ವಿತೀಯ ಬಿಇಡಿ ಪ್ರಶಿಕ್ಷಣಾರ್ಥಿಗಳಿಗಾಗಿ ಬುಧವಾರ ಏರ್ಪಡಿಸಿದ್ದ ಶಿಕ್ಷಣದಲ್ಲಿ ರಂಗಭೂಮಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಯ ಆರಂಭದ ತರಗತಿಗಳು ಸಾಂಸ್ಕೃತಿಕವಾಗಿ ಪ್ರಾರಂಭಗೊಂಡು ಶಾಲಾ ವಾರ್ಷಿಕೋತ್ಸವದಿಂದ ಅಂತ್ಯಗೊಳ್ಳುತ್ತದೆ. ಮನರಂಜನೀಯವಾಗಿ ಪ್ರಶಿಕ್ಷಣಾರ್ಥಿಗಳು ಬೋಧನಾ ಪ್ರಕ್ರಿಯೆಯಲ್ಲಿ ತೊಡಗಬೇಕು. ಅದಕ್ಕೆ ಬೇಕಾದ ಸವಲತ್ತುಗಳು ರಂಗಭೂಮಿಯಿಂದ ಪಡೆಯಬಹುದು. ವೇಷಭೂಷಣ, ಪ್ರಸಾಧನ, ಪರಿಕರ, ಮುಖವಾಡ, ವರ್ಣಕಲೆ ಮುಂತಾದ ಕಸರತ್ತಿನಿಂದ ಕೂಡಿದ ಪಾಠೋಪಕರಣಗಳು ಮತ್ತು ಪೀಠೋಪಕರಣಗಳನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳಬಹುದು. ಇದರಿಂದ ಪರಿಣಾಮಕಾರಿ ಬೋಧನೆಗೆ ಉತ್ತಮ ಫಲಿತಾಂಶವನ್ನು ಕಂಡುಕೊಳ್ಳಬಹುದು ಎಂದರು.

ವಾಹಿನಿಗಳ ಹಾವಳಿಯಿಂದ ಇಂದು ರಂಗಭೂಮಿ ಚಟುವಟಿಕೆಗಳು ಕಡಿಮೆಯಾಗಿರಬಹುದು. ಆದರೆ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ನಾಟಕಗಳು ಜನರನ್ನು ಹಿಡಿದಿಟ್ಟುಕೊಳ್ಳುತ್ತವೆ. ಹಬ್ಬ, ಜಾತ್ರೆಗಳಲ್ಲಿ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ವೃತ್ತಿ ರಂಗಭೂಮಿಗಳು ಸಮಾಜ ತಿದ್ದುವಲ್ಲಿಯಶಸ್ವಿತನ ಕಂಡುಕೊಂಡಿದ್ದವು. ನಾಟಕಗಳು ಕೇವಲ ಮನರಂಜನೆಗಾಗಿ ಮೀಸಲಿದ್ದಿಲ್ಲವೆಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ಜಿ.ದಾಸಯ್ಯ, ಪ್ರಶಿಕ್ಷಣಾರ್ಥಿಗಳು ಚಟುವಟಿಕೆಯಿಂದಿರಲು ರಂಗಭೂಮಿ ಸಹಕಾರಿಯಾಗಿದೆ. ಸ್ಪಷ್ಟ ಮಾತುಕತೆ, ದೇಹದ ನಿಲುವು ಪ್ರತಿಯೊಬ್ಬ ಶಿಕ್ಷಕನ ಸಂಪತ್ತಾಗಬೇಕು. ವೇದಿಕೆ ಭೀತಿ ಕಳೆದುಕೊಂಡು ಪಾಠ ಪ್ರವಚನ ಮಾಡಲು ರಂಗಭೂಮಿ ಒಡನಾಟ ಅಗತ್ಯವೆಂದರು.

ಉಪನ್ಯಾಸಕ ಡಾ.ಪಿ.ರಾಧಮ್ಮ, ಡಾ.ಎಂ.ಎಸ್.ಲಕ್ಷ್ಮೀದೇವಿ, ಕೆ.ತ್ರಿವೇಣಿ, ಎಂ.ಉಷಾಕಿರಣ, ಟಿ.ತಿಪ್ಪೇರುದ್ರಯ್ಯ ಹಾಗೂ ಬಿ.ಪಾತಲಿಂಗಪ್ಪ ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದರು. ನೀನಾಸಂ ಪದವೀಧರ ಹಾಗೂ ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ನಿರ್ದೇಶನದಲ್ಲಿ ದ್ವಿತೀಯ ಬಿಇಡಿ ಪ್ರಶಿಕ್ಷಣಾರ್ಥಿಗಳು ಮೂಢನಂಬಿಕೆ, ಬಾಲ್ಯವಿವಾಹ, ಮತದಾನ, ವರದಕ್ಷಿಣೆ, ಬಾಲಕಾರ್ಮಿಕ, ಅನಕ್ಷರತೆ, ಭ್ರಷ್ಟಾಚಾರ ಹಾಗೂ ಜಾತಿಪದ್ಧತಿ ನಾಟಕಗಳನ್ನು ಪ್ರದರ್ಶನ ನೀಡಿದರು. ಐಶ್ವರ್ಯ, ಗೀತಾಂಜಲಿ, ಶಿವಮ್ಮ ಪ್ರಾರ್ಥಿಸಿದರು. ಚಿತ್ರ ಸ್ವಾಗತಿಸಿದರು. ಸಂತೋಕುಮಾರಿ ನಿರೂಪಿಸಿದರು.