ಸಾರಾಂಶ
ಯಾರೇ ಬರಲಿ, ನಮಗೆ ಅಧಿಕೃತ ಆದೇಶ ತಂದುಕೊಟ್ಟಲ್ಲಿ ಮಾತ್ರ ನಮ್ಮ ಮತದಾನ ಬಹಿಷ್ಕಾರ ಹಿಂಪಡೆಯುವ ಯೋಚನೆ ಮಾಡುತ್ತೇವೆಂಬ ಆಕ್ರೋಶ ಸಾರಿದ್ದ ಸಿರಿಗೆರೆ ಸಮೀಪದ ಸಿದ್ದಾಪುರ ಗ್ರಾಮದ ಸುಮಾರು ೫೦೦ಕ್ಕೂ ಹೆಚ್ಚು ಮತದಾರರ ಮನ ಒಲಿಸಿ ಅವರನ್ನು ಸಮೀಪದ ಮತಗಟ್ಟೆಗೆ ಕರೆದೊಯ್ದು ಮತದಾನ ಪ್ರಕ್ರಿಯೆಯಲ್ಲಿ ಪಾಲುಗೊಳ್ಳುವಂತೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮಾಡಿದ ಪ್ರಸಂಗ ಇಂದು ನಡೆಯಿತು.
ಸಿರಿಗೆರೆ: ಯಾರೇ ಬರಲಿ, ನಮಗೆ ಅಧಿಕೃತ ಆದೇಶ ತಂದುಕೊಟ್ಟಲ್ಲಿ ಮಾತ್ರ ನಮ್ಮ ಮತದಾನ ಬಹಿಷ್ಕಾರ ಹಿಂಪಡೆಯುವ ಯೋಚನೆ ಮಾಡುತ್ತೇವೆಂಬ ಆಕ್ರೋಶ ಸಾರಿದ್ದ ಸಿರಿಗೆರೆ ಸಮೀಪದ ಸಿದ್ದಾಪುರ ಗ್ರಾಮದ ಸುಮಾರು ೫೦೦ಕ್ಕೂ ಹೆಚ್ಚು ಮತದಾರರ ಮನ ಒಲಿಸಿ ಅವರನ್ನು ಸಮೀಪದ ಮತಗಟ್ಟೆಗೆ ಕರೆದೊಯ್ದು ಮತದಾನ ಪ್ರಕ್ರಿಯೆಯಲ್ಲಿ ಪಾಲುಗೊಳ್ಳುವಂತೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮಾಡಿದ ಪ್ರಸಂಗ ಇಂದು ನಡೆಯಿತು.
ಹಲವು ವರ್ಷಗಳ ಕಾಲ ಜಿಲ್ಲಾಧಿಕಾರಿಗಳ ಕಚೇರಿಗೆ ಸಮಸ್ಯೆಗಳನ್ನು ಹೊತ್ತು ಅಲೆದಾಡಿದ್ದೇವೆ. ಸ್ಥಳೀಯ ಶಾಸಕರಲ್ಲಿ ಮನವಿ ಮಾಡಿದ್ದೇವೆ. ಏನೂ ಕೆಲಸವಾಗಿಲ್ಲ. ಜನರ ಆರೋಗ್ಯ, ಶಿಕ್ಷಣ, ನಾಗರೀಕ ಸೌಲಭ್ಯಗಳು ಕುಂಠಿತವಾತಿವೆ. ಗಣಿಗಾರಿಕೆ ನಡೆಯುವ ಸ್ಥಳ ನಮ್ಮೂರಿಂದ ಕೇವಲ ೨ ಕಿ.ಮೀ. ಇದ್ದರೂ ರೈತರಿಗೆ ಬೆಳೆ ಪರಿಹಾರವಿಲ್ಲ, ಜನರಿಗೆ ಉದ್ಯೋಗವಿಲ್ಲ ಎಂದು ಶ್ರೀಗಳಲ್ಲಿ ಮೊರೆ ಇಟ್ಟರು.ಸಿದ್ದಾಪುರ ಗ್ರಾಮಸ್ಥರು ಮತದಾನಕ್ಕೆ ಬಹಿಷ್ಕಾರ ಹಾಕಿರುವ ಸುದ್ದಿ ತಿಳಿಯುತ್ತಲೇ ಸಿರಿಗೆರೆಯ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿ ಸಿದ್ದಾಪುರ ಗ್ರಾಮಕ್ಕೆ ಆಗಮಿಸಿದ ಶ್ರೀಗಳು ಅಲ್ಲಿಯ ಬಸವೇಶ್ವರ ದೇವಾಲಯದ ಮುಂಭಾಗದಲ್ಲಿ ಗ್ರಾಮದ ಜನರ ಸಭೆ ಸೇರಿಸಿದರು. ಪ್ರಜಾಪ್ರಭುತ್ವಕ್ಕೆ ಶಕ್ತಿ ಬರುವುದೇ ಮತದಾನ ಮಾಡುವುದರಿಂದ. ಅದು ನಿಮ್ಮ ಪವಿತ್ರವಾದ ಹಕ್ಕು. ಅದನ್ನು ಕಳೆದುಕೊಳ್ಳಬೇಡಿ ಎಂದು ಕಿವಿ ಮಾತು ಹೇಳಿದರು.
ಗ್ರಾಮದ ಸಮಸ್ಯೆಗಳನ್ನು ಕುರಿತು ನಾಗರಾಜ್, ಚಿದಾನಂದ್, ಪ್ರಕಾಶ್ ಮುಂತಾದವರು ಶ್ರೀಗಳಿಗೆ ಮನವರಿಕೆ ಮಾಡಿಕೊಟ್ಟರು. ನಾವು ಗ್ರಾಮದ ಜನರ ಪರವಾಗಿದ್ದೇವೆ. ಇವೆಲ್ಲವೂ ಒಂದು ದಿನದಲ್ಲಿ ಆಗುವ ಕೆಲಸಗಳಲ್ಲ. ಇವೆಲ್ಲವನ್ನೂ ಕ್ರಮೇಣ ಸರಿಪಡಿಸೋಣ. ಮತದಾನದ ಸಮಯ ಮೀರುವ ಮುಂಚೆ ಮತದಾನ ಮಾಡಿ ಎಂದು ಶ್ರೀಗಳು ಗ್ರಾಮಸ್ಥರಿಗೆ ಸೂಚಿಸಿದರಲ್ಲದೆ, ತಾವು ಮತಗಟ್ಟೆಗೆ ಹೊರಡುತ್ತೇವೆ ಎಂದರು.