ಸಾರಾಂಶ
ನರೇಂದ್ರ ಮೋದಿಯವರು ಪ್ರಧಾನಿಯಾದರೆ ದೇಶವನ್ನೇ ತೊರೆಯುತ್ತೇನೆ ಎಂದು ಹೇಳುತ್ತಿದ್ದ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರೇ ಈ ಚುನಾವಣೆಯಲ್ಲಿ ಮೋದಿಯವರ ಜೊತೆ ಕೈಜೋಡಿಸುವ ಮೂಲಕ ಅಭಿವೃದ್ಧಿಯ ಪರ ನಿಂತಿದ್ದಾರೆ. ಇಡೀ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ದೇಶದ ಚುಕ್ಕಾಣಿ ಹಿಡಿಯುವಂತೆ ಮಾಡಬೇಕಿದೆ.
ಗುಬ್ಬಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ತಿಳಿಸಿದರು.
ಪಟ್ಟಣದ ವಕೀಲರ ಸಂಘದಲ್ಲಿ ಸಂವಾದ ನಡೆಸಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಯ ಬಗ್ಗೆ ಅಪಾರ ಕನಸನ್ನು ಕಂಡಿರುವ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ವಕೀಲರ ಪಾತ್ರ ಮಹತ್ತರವಾಗಿದ್ದು ಸಾಮಾನ್ಯ ಜನರಲ್ಲಿ ಅರಿವು ಮೂಡಿಸಿ ಬಿಜೆಪಿಯನ್ನು ಬೆಂಬಲಿಸುವಂತೆ ಕೋರಬೇಕು ಎಂದು ತಿಳಿಸಿದರು.ಉತ್ತಮ ಸಮಾಜ ನಿರ್ಮಿಸುವಲ್ಲಿ ವಕೀಲರ ಪಾತ್ರ ಪ್ರಮುಖವಾಗಿದ್ದು, ವಕೀಲರು ರಾಜಕೀಯದಲ್ಲಿ ಮುಂಚೂಣಿಗೆ ಬರಬೇಕಿದೆ ಎಂದು ತಿಳಿಸಿದರು.
ವಕೀಲ ಗೋಪಾಲಗೌಡ ಮಾತನಾಡಿ, ನರೇಂದ್ರ ಮೋದಿಯವರು ಪ್ರಧಾನಿಯಾದರೆ ದೇಶವನ್ನೇ ತೊರೆಯುತ್ತೇನೆ ಎಂದು ಹೇಳುತ್ತಿದ್ದ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರೇ ಈ ಚುನಾವಣೆಯಲ್ಲಿ ಮೋದಿಯವರ ಜೊತೆ ಕೈಜೋಡಿಸುವ ಮೂಲಕ ಅಭಿವೃದ್ಧಿಯ ಪರ ನಿಂತಿದ್ದಾರೆ. ಇಡೀ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ದೇಶದ ಚುಕ್ಕಾಣಿ ಹಿಡಿಯುವಂತೆ ಮಾಡಬೇಕಿದೆ, ವಕೀಲರು ಅಭಿವೃದ್ಧಿಯ ಪರ ನಿಂತು ಸಹಕರಿಸಬೇಕಿದೆ ಎಂದು ತಿಳಿಸಿದರು.ರಾಜ್ಯ ವಕೀಲ ಪರಿಷತ್ತಿನ ಸದಸ್ಯ ಜೆ. ರಾಜಣ್ಣ, ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ ವಸಂತ ಕುಮಾರ್ ಮಾತನಾಡಿದರು.
ವಕೀಲರ ಸಂಘದ ಅಧ್ಯಕ್ಷ ಬಿ ಕೆ ಚಿದಾನಂದಮೂರ್ತಿ, ಉಪಾಧ್ಯಕ್ಷ ಬಿ. ಆರ್. ಶಿವಯೋಗಿಶ್, ಕಾರ್ಯದರ್ಶಿ ಸುರೇಶ್, ಬಿಜೆಪಿ ಮುಖಂಡ ಎಸ್. ಡಿ. ದಿಲೀಪ್ ಕುಮಾರ್, ಸಂಘದ ಪದಾಧಿಕಾರಿಗಳು, ವಕೀಲರು ಹಾಜರಿದ್ದರು.