ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲಪುರಾಣ, ಪ್ರವಚನಗಳಿಂದ ಧರ್ಮ, ಸಂಸ್ಕ್ರತಿ, ಮಹಾತ್ಮರ ಮತ್ತು ಶರಣರ ತತ್ವ-ಸಿದ್ಧಾಂತಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಧ್ಯಾತ್ಮಿಕತೆ ಚಿಂತನೆ ಮೈಗೂಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಖಾಸ್ಗತೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಾಶೀನಾಥ ಬಿರಾದಾರ ಹೇಳಿದರು.ಪಟ್ಟಣದ ಶ್ರೀ ದಾನಮ್ಮ ದೇವಿ ದೇವಸ್ಥಾನದ 15 ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ 11 ದಿನಗಳ ಕಾಲ ನಡೆದ ಅಧ್ಯಾತ್ಮಿಕ ಪ್ರವಚನ ಮಂಗಳ ಕಾರ್ಯಕ್ರಮದಲ್ಲಿ ಮಾತನಾಡಿದರು.ಪತ್ರಕರ್ತ ಬಸವರಾಜ ಕಲಾದಗಿ ಮಾತನಾಡಿ, ಪ್ರವಚನಕಾರರು ಹೇಳುವ ಆಧ್ಯಾತ್ಮಿಕ ಸಂದೇಶಗಳನ್ನು ತಿಳಿದುಕೊಂಡು ಸಮಾಜದಲ್ಲಿ ಉತ್ತಮರಾಗಿ ಬಾಳಬೇಕು. ಯುವಜನಾಂಗ ಯಾವುದೇ ದುಶ್ಚಟಗಳಿಗೇ ದಾಸರಾಗದೇ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಕಡೆಗೆ ಗಮನ ಹರಿಸಬೇಕು ಎಂದರು.11 ದಿನಗಳ ಕಾಲ ಪ್ರವಚನ ನೀಡಿದ ನರಗುಂದ ತಪೋತಾಣ ಡಾ.ಸಿದ್ದವೀರ ಶಿವಾಚಾರ್ಯ ಅವರನ್ನು ಕಮಿಟಿ ವತಿಯಿಂದ ಸತ್ಕರಿಸಲಾಯಿತು. ಎಂಬಿಬಿಎಸ್ ಪರೀಕ್ಷೆಯಲ್ಲಿ ಮೂರು ಚಿನ್ನದ ಪದಕಗಳನ್ನು ಪಡೆದ ಡಾ.ತೇಜಸ್ವಿನಿ ಗದಗ ಅವರನ್ನು ಸನ್ಮಾನಿಸಲಾಯಿತು. ದಾನಮ್ಮದೇವಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪತ್ರಕರ್ತರಾದ ರವಿ ಹುಲಕುಂದ, ಉದಯ ಕೊಳೇಕರ, ಶರೀಫ ನದಾಫ ಆಗಮಿಸಿದ್ದರು. ಉಪನ್ಯಾಸಕಿ ಸವಿತಾ ರೊಟ್ಟಿ ಸ್ವಾಗತಿಸಿದರು. ಜಿ.ಜಿ.ಸಾಲಿ ನಿರೂಪಿಸಿದರು. ದಾನಮ್ಮದೇವಿ ಟ್ರಸ್ಟ್ ಕಮಿಟಿ ಸದಸ್ಯರು ಹಾಗೂ ನೂರಾರು ಭಕ್ತರು ಇದ್ದರು.