ಸಾರಾಂಶ
ಮುಂಬೈ : ಮಹಾರಾಷ್ಟ್ರದಲ್ಲಿ ಈ ಬಾರಿಯ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ನಿಂದ ಒಬ್ಬ ಮುಸ್ಲಿಂ ಅಭ್ಯರ್ಥಿಗೂ ಟಿಕೆಟ್ ನೀಡಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ನಸೀಮ್ ಖಾನ್ ಚುನಾವಣಾ ಪ್ರಚಾರದಿಂದ ಹಿಂದೆ ಸರಿದಿದ್ದಾರೆ.
ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿರುವ ಖಾನ್, ‘ನಾನು ಪಕ್ಷದ ಪ್ರಚಾರ ಸಮಿತಿಯ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ಅಲ್ಲದೆ ಈ ಚುನಾವಣೆಯಲ್ಲಿ ಪ್ರಚಾರ ಮಾಡುವುದಿಲ್ಲ. ಕಾಂಗ್ರೆಸ್ಗೆ ಮುಸ್ಲಿಮರ ಮತ ಬೇಕು, ಆದರೆ ಅಭ್ಯರ್ಥಿ ಏಕೆ ಬೇಡ ಎಂದು ಎಲ್ಲರೂ ಕೇಳುತ್ತಿದ್ದಾರೆ. ಪಕ್ಷದಿಂದ ಒಬ್ಬ ಮುಸ್ಲಿಂ ಅಭ್ಯರ್ಥಿಗೂ ಟಿಕೆಟ್ ನೀಡದಿರುವ ಬಗ್ಗೆ ನನಗೆ ಅತೃಪ್ತಿಯಿದೆ’ ಎಂದು ಹೇಳಿದ್ದಾರೆ.
ಅಲ್ಲದೆ, ‘ಮತಕ್ಕೆ ಮಾತ್ರ ಮುಸ್ಲಿಮರು ಬೇಕೇ? ಅವರಿಗೆ ಯಾವುದೇ ಸ್ಥಾನಮಾನ ಬೇಡವೆ’ ಎಂದು ಅವರು ಪ್ರಶ್ನಿಸಿದ್ದಾರೆ.
48 ಲೋಕಸಭಾ ಕ್ಷೇತ್ರಗಳಿರುವ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷ 17 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಇನ್ನುಳಿದ ಸೀಟುಗಳನ್ನು ಮಹಾವಿಕಾಸ ಅಘಾಡಿಯ ಶಿವಸೇನೆ ಹಾಗೂ ಎನ್ಸಿಪಿಗೆ ಬಿಟ್ಟುಕೊಟ್ಟಿದೆ. ಶಿವಸೇನೆ ಹಾಗೂ ಎನ್ಸಿಪಿ ಕೂಡ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ.