ಕಾಂಗ್ರೆಸ್‌ಗೆ ಮತ್ತೊಂದು ಶಾಕ್‌: ವಕ್ತಾರೆ ರಾಜೀನಾಮೆ

| Published : May 06 2024, 12:36 AM IST / Updated: May 06 2024, 05:33 AM IST

Congress flag

ಸಾರಾಂಶ

ಪಕ್ಷದಲ್ಲಿ ಪುರುಷ ಮನಸ್ಥಿತಿ ಇದೆ. ಇದನ್ನು ಬಯಲಿಗೆ ಎಳೆಯುವೆ. ಅಲ್ಲದೆ ಅಯೋಧ್ಯೆಗೆ ಹೋಗಲು ಪಕ್ಷ ಅನುಮತಿ ನೀಡದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ವಕ್ತಾರೆ ರಾಧಿಕಾ ಖೇರಾ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.

ರಾಯ್‌ಪುರ: ಲೋಕಸಭೆ ಚುನಾವಣೆ ನಡುವೆಯೇ ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆಯಾಗಿದೆ. ಛತ್ತೀಸ್‌ಗಢದ ಕಾಂಗ್ರೆಸ್ ನಾಯಕಿ ಹಾಗೂ ಪಕ್ಷದ ವಕ್ತಾರೆ ರಾಧಿಕಾ ಖೇರಾ, ‘ಪಕ್ಷದಲ್ಲಿ ಪುರುಷ ಮನಸ್ಥಿತಿ ಇದೆ. ನನಗೆ ಅವಮಾನವಾಗಿದೆ’ ಎಂದು ಆರೋಪಿಸಿ ಭಾನುವಾರ ರಾಜೀನಾಮೆ ನೀಡಿದ್ದಾರೆ.

ಛತ್ತೀಸಗಢ ಕಾಂಗ್ರೆಸ್‌ ಘಟಕದಲ್ಲಿ ರಾಧಿಕಾ ಖೇರಾಗೂ ಪಕ್ಷದ ನಾಯಕರೊಬ್ಬರಿಗೂ ಜಟಾಪಟಿ ನಡೆದಿತ್ತು ಎನ್ನಲಾಗಿದೆ ಹಾಗೂ ಇದರಿಂದ ನೊಂದು ಖೇರಾ ಅತ್ತಿದ್ದರು ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಅವರು ರಾಜೀನಾಮೆ ನೀಡಿದ್ದಾರೆ.ಇತ್ತೀಚೆಗೆ ಪಕ್ಷಕ್ಕೆ ವಕ್ತಾರ ಗೌರವ ವಲ್ಲಭ್‌, ದಿಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಅರವಿಂದರ್‌ ಸಿಂಗ್‌ ಲವ್ಲಿ ರಾಜೀನಾಮೆ ನೀಡಿದ್ದರು. ಅದರ ಬೆನ್ನಲ್ಲೇ ಖೇರಾ ಅವರ ರಾಜೀನಾಮೆ ನಿರ್ಧಾರ ಹೊರಬಿದ್ದಿದೆ.

ಕಾಂಗ್ರೆಸ್‌ಗೆ ರಾಧಿಕಾ ಚಾಟಿ:ಭಾನುವಾರ ಈ ಬಗ್ಗೆ ಹೇಳಿಕೆ ನೀಡಿರುವ ಅವರು, ‘ಇಂದು ತೀವ್ರ ನೋವಿನಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಛತ್ತೀಸಗಢ ಕಾಂಗ್ರೆಸ್‌ ಘಟಕದಲ್ಲಿ ಅಗೌರವ ತೋರಲಾಗಿದೆ ಮತ್ತು ಪಕ್ಷದೊಳಗಿನ ‘ಪುರುಷವಾದಿ ಮನಸ್ಥಿತಿ’ ಇದೆ. ಇಂಥ ಮನಸ್ಥಿತಿಯಲ್ಲಿ ಇರುವ ಜನರನ್ನು ಬಯಲಿಗೆ ಎಳೆಯುವೆ ಎಂದು ಶಪಥ ಮಾಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಅಲ್ಲದೆ, ‘ನಾನು ಅಯೋಧ್ಯೆಗೆ ರಾಮ ಪ್ರತಿಷ್ಠಾಪನೆಗೆ ಹೋಗಬೇಕು ಎಂದುಕೊಂಡಿದ್ದೆ. ಅದಕ್ಕೆ ಪಕ್ಷ ಬಿಡಲಿಲ್ಲ. ಅಂದು ಧರ್ಮ ಸ್ಥಾಪನೆಗೆ ಕಂಸ, ರಾವಣ ಅಡ್ಡಿಪಡಿಸುತ್ತಿದ್ದರು. ಇಂದು ರಾಮನ ಹೆಸರು ಹೇಳಿದವರಿಗೆ ಅಂಥ ಅಡ್ಡಿಖಳು ಉಂಟಾಗುತ್ತಿವೆ’ ಎಂದು ಆರೋಪಿಸಿದ್ದಾರೆ.‘ನಾನು ಒಬ್ಬ ಹುಡುಗಿ ಮತ್ತು ನಾನು ಹೋರಾಡಬಲ್ಲೆ. ನಾನು ಈಗ ಅದೇ ರೀತಿ ಮಾಡುತ್ತಿದ್ದೇನೆ. ನನಗೆ ನನ್ನ ದೇಶದ ಜನರಿಗೆ ನ್ಯಾಯಕ್ಕಾಗಿ ನಾನು ಹೋರಾಟವನ್ನು ಮುಂದುವರಿಸುತ್ತೇನೆ’ ಎಂದು ರಾಧಿಕಾ ಹೇಳಿದ್ದಾರೆ.