ಪುರಾಣದಲ್ಲಿ ಉಲ್ಲೇಖಿತ ದೈತ್ಯ ಹಾವು ವಾಸುಕಿ ಇದ್ದಿದ್ದು ನಿಜ!

| Published : Apr 19 2024, 01:06 AM IST / Updated: Apr 19 2024, 01:18 PM IST

Snake venom

ಸಾರಾಂಶ

ಮಹಾಭಾರತ ಹಾಗೂ ಭಾಗವತದಲ್ಲಿ ಪ್ರಸ್ತಾಪಿತ ಶ್ರೀಕೃಷ್ಣನೊಂದಿಗೆ ನಂಟು ಹೊಂದಿರುವ ವಾಸುಕಿ ಎಂಬ ದೈತ್ಯ ಹಾವು ಕಲ್ಪನೆಯಲ್ಲ. ಅಂಥ ಹಾವುಗಳು ನಿಜವಾಗಿಯೂ ಭಾರತದಲ್ಲಿ ಇತ್ತು ಎಂದು ವಿಜ್ಞಾನಿಯೊಬ್ಬರು ಪತ್ತೆ ಹಚ್ಚಿದ್ದಾರೆ.

ನವದೆಹಲಿ: ಮಹಾಭಾರತ ಹಾಗೂ ಭಾಗವತದಲ್ಲಿ ಪ್ರಸ್ತಾಪಿತ ಶ್ರೀಕೃಷ್ಣನೊಂದಿಗೆ ನಂಟು ಹೊಂದಿರುವ ವಾಸುಕಿ ಎಂಬ ದೈತ್ಯ ಹಾವು ಕಲ್ಪನೆಯಲ್ಲ. ಅಂಥ ಹಾವುಗಳು ನಿಜವಾಗಿಯೂ ಭಾರತದಲ್ಲಿ ಇತ್ತು ಎಂದು ವಿಜ್ಞಾನಿಯೊಬ್ಬರು ಪತ್ತೆ ಹಚ್ಚಿದ್ದಾರೆ. 

ಪಶ್ಚಿಮ ಭಾರತದ ಪ್ರದೇಶದಲ್ಲಿ ಈ ದೈತ್ಯ ಹಾವು ಜೀವಿಸಿರುವ ಕುರಿತು ಅದರ ಪಳೆಯುಳಿಕೆಗಳು ಕಲ್ಲಿದ್ದಲು ಗಣಿ ಪ್ರದೇಶವೊಂದರಲ್ಲಿ ಲಭ್ಯವಾಗಿದೆ. ಸುಮಾರು 4.7 ಕೋಟಿ ವರ್ಷಗಳ ಹಿಂದೆ ಶೀತಯುಗದಲ್ಲಿ ಭಾರತದಲ್ಲಿದ್ದ ಅತಿದೊಡ್ಡ ಹಾವಿನ ಪಳೆಯುಳಿಕೆಗಳು ಪತ್ತೆಯಾಗಿದ್ದು, ಅದು ಪುರಾಣಗಳಲ್ಲಿ ಉಲ್ಲೇಖವಾಗಿರುವಂತೆ ಬರೋಬ್ಬರಿ 1000 ಕೆಜಿ ತೂಕ ಹಾಗೂ 36ರಿಂದ 50 ಅಡಿ ಉದ್ದವಿದ್ದಿರಬಹುದು ಎಂದು ರೂರ್ಕಿ ಐಐಟಿ ಪ್ರಾಧ್ಯಾಪಕರಾದ ದೇಬಜಿತ್‌ ದತ್ತ ಸೈಂಟಿಫಿಕ್‌ ರಿಪೋರ್ಟ್‌ ನಿಯತಕಾಲಿಕೆಗೆ ಬರೆದಿರುವ ಸಂಶೋಧನಾ ವರದಿಯಲ್ಲಿ ತಿಳಿಸಿದ್ದಾರೆ.

ವಾಸುಕಿ ಎಂದು ನಾಮಕರಣ:

36ರಿಂದ 50 ಅಡ್ಡಿ ಉದ್ದವಿರುವ ಈ ಹಾವಿಗೆ ಲೇಖಕರಾದ ದೇಬಜಿತ್‌ ದತ್ತಾ ಪುರಾಣಗಳಲ್ಲಿ ಹಾವಿನ ರಾಜ ಎಂದೇ ನಂಬಲಾಗಿರುವ ವಾಸುಕಿ ಎಂಬ ಹೆಸರನ್ನು ನಾಮಕರಣ ಮಾಡಿದ್ದಾರೆ.

ಇಲ್ಲಿಯವರೆಗೆ ಕೊಲಂಬಿಯಾದಲ್ಲಿ 6 ಕೋಟಿ ವರ್ಷಗಳ ಹಿಂದೆ ಜೀವಿಸಿದ್ದ ಸುಮಾರು 43 ಅಡಿ ಉದ್ದದ ಟಿಟನೋಬೋವಾ ಎಂಬ ಹಾವನ್ನು ಅತಿ ಉದ್ದದ ಹಾವು ಎಂದು ತಿಳಿಯಲಾಗಿತ್ತು. ಪ್ರಸ್ತುತ ಜೀವಂತವಾಗಿರುವ ಹಾವು ತಳಿಗಳ ಪೈಕಿ ಏಷ್ಯಾಟಿಕ್‌ ಪೈಥಾನ್‌ (33 ಅಡಿ) ಪ್ರಪಂಚದ ಅತಿ ಉದ್ದದ ಹಾವಾಗಿ ಗುರುತಿಸಲ್ಪಟ್ಟಿದೆ.

ಹೇಗಿತ್ತು ಹಾವಿನ ದಿನಚರಿ? 

ಹಾವು ಅತ್ಯಂತ ತೂಕವುಳ್ಳದ್ದಾಗಿದ್ದು ಮತ್ತು ಅತ್ಯಂತ ಉದ್ದವಾಗಿದ್ದ ಹಿನ್ನೆಲೆಯಲ್ಲಿ ಅದು ಅತ್ಯಂತ ನಿಧಾನಗತಿಯಲ್ಲಿ ನಡೆಯುವ ಜೀವಿಯಾಗಿತ್ತು ಎಂಬುದಾಗಿ ಅಂದಾಜಿಸಲಾಗಿದೆ. ಅಲ್ಲದೆ ಹಾವು ಶೀತಯುಗದಲ್ಲಿ ಜೀವಿಸಿದ್ದರಿಂದ ಇದು ಸಾರ್ವಕಾಲಿಕವಾಗಿ ಅತಿದೊಡ್ಡ ಶೀತರಕ್ತ ಪ್ರಾಣಿಯಾಗಿತ್ತು ಎಂದು ಊಹಿಸಲಾಗಿದೆ. ಜೊತೆಗೆ ಸಂಕೋಚನ ಪ್ರಕ್ರಿಯೆಯ ಮೂಲಕ ತನ್ನ ಬೇಟೆಯ ಆಹಾರವನ್ನು ಸೇವಿಸುತ್ತಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದು ಶೀತಯುಗದಲ್ಲಿ ಇದ್ದುದರಿಂದ ಶೀತರಕ್ತ ಪ್ರಾಣಿಗಳಾದ ತಿಮಿಂಗಿಲ, ಮೊಸಳೆ ಮುಂತಾದವುಗಳು ಇದರ ಆಹಾರವಾಗಿದ್ದಿರಬಹುದು ಎಂದು ಊಹಿಸಲಾಗಿದೆ.