ಸಾರಾಂಶ
ಬಿಜಾಪುರ : ಛತ್ತಿಸಗಢದಲ್ಲಿ ನಕ್ಸಲ್ ನಿಗ್ರಹಕ್ಕೆ ಪಣತೊಟ್ಟಿರುವ ಭದ್ರತಾ ಪಡೆ ಶುಕ್ರವಾರ 12 ನಕ್ಸಲರನ್ನು ಹೊಡೆದುರುಳಿಸಿದೆ. ಈ ಮೂಲಕ ಈ ವರ್ಷ ಛತ್ತೀಸಗಢದಲ್ಲಿ ಬಸ್ತರ್ ನಕ್ಸಲ್ ವಲಯದಲ್ಲಿ ಭದ್ರತಾ ಸಿಬ್ಬಂದಿಗಳ ಗುಂಡೇಟಿಗೆ ಬಲಿಯಾದ ನಕ್ಸಲರ ಸಂಖ್ಯೆ 100ರ ಗಡಿ ದಾಟಿದೆ.ಬಿಜಾಪುರ ಜಿಲ್ಲೆ ಗಂಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಿಡಿಯಾ ಗ್ರಾಮದಲ್ಲಿ ಭದ್ರತಾ ಸಿಬ್ಬಂದಿಗಳು ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ತೆರಳಿದ ಸಂದರ್ಭದಲ್ಲಿ ಗುಂಡಿನ ಚಕಮಕಿ ನಡೆದಿದೆ. ಹತ ನಕ್ಸಲರ ಬಳಿ ಇದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಂಡಿದ್ದಾರೆ.
ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಸಿಬ್ಬಂದಿಗಳನ್ನು ಛತ್ತೀಸಗಢದ ಸಿಎಂ ವಿಷ್ಣುದೇವ ಸಾಯಿ ಅಭಿನಂದಿಸಿದ್ದಾರೆ.ಇತ್ತೀಚಿನ ದಿನಗಳಲ್ಲಿ ಮಾವೋವಾದಿಗಳ ಮೇಲೆ ಭದ್ರತಾ ಪಡೆ ಮಾಡಿದ ಮೂರನೇ ಅತಿದೊಡ್ಡ ದಾಳಿಯಾಗಿದೆ. ಏ. 16 ರಂದು 29, ಏ.30 ರಂದು 10 ಜನ ನಕ್ಸಲರನ್ನು ಭದ್ರತಾ ಸಿಬ್ಬಂದಿಗಳು ಹತ್ಯೆ ಮಾಡಿದ್ದರು. ರಾಜ್ಯದ ಬಸ್ತಾರ್ ಜಿಲ್ಲೆಯಲ್ಲಿ ನಡೆದ ಬೇರೆ ಬೇರೆ ಪ್ರಕರಣಗಳಲ್ಲಿ ಈ ವರ್ಷ 103 ನಕ್ಸಲರು ಭದ್ರತಾ ಸಿಬ್ಬಂದಿಗಳಿಂದ ಕೊಲ್ಲಲ್ಪಟ್ಟಿದ್ದಾರೆ.